ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ನವೆಂಬರ್ 15, 2018

ಮಡದಿಗೆ ಬಣ್ಣ ಬಣ್ಣದ ಸೀರೆ



       


                                                             ಮಡದಿಗೆ ಬಣ್ಣ ಬಣ್ಣದ ಸೀರೆ

ಭೂವಿಯ ಒಡಲಿನಿಂದ
ಹೆಕ್ಕಿತೆಗೆದ
ಮಣ್ಣ ಮುದ್ದೆಗೆ
ತಿಗರಿ ತಿರುಗಿಸಿ
ಆಕೃತಿಗೆ ಜೀವದ
ರೂಪ ಕೊಟ್ಟು
ಅರಿಷಡ್ವರ್ಗಗಳೆಂಬ
ಆವಿಗೆಯಲ್ಲಿ ಸುಟ್ಟು
ಕನಸಿನ ಬಣ್ಣ ಬಳೆದು
ಜೀವಂತಿಕೆಯ ಮೂಡಿಸಿ
ಸಂತೆಯಲ್ಲಿ ಮಾರಿ
ನನ್ನ ಛಾಯಗೆ
ಬಣ್ಣಬಣ್ಣದ ಸೀರೆಯ ಕೊಂಡು
ಜೋಡೆತ್ತಿನ ಬಂಡಿ ಹೊಡೆದುಕೊಂಡು
ಊರ ದಾರಿಹಿಡಿದೆ.....


ಕುಬೇರ ಕುಂಬಾರ
12/11/2018

ಮಂಗಳವಾರ, ನವೆಂಬರ್ 13, 2018

ಬುದ್ಧ ಅಂಡ್ ಹಿಸ್ ಧಮ್ಮ ಮತ್ತು ಪ್ರಜಾಪತಿ



                                    ಬುದ್ಧ ಅಂಡ್ ಹಿಸ್ ಧಮ್ಮ  ಮತ್ತು ಪ್ರಜಾಪತಿ(ಕುಂಬಾರ)   

              
    ಬುದ್ಧ ಅಂಡ್ ಹಿಸ್ ಧಮ್ಮ ಎಂಬುವುದು ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹತ್ತ್ವದ ಕೃತಿಯಲ್ಲಿ ಒಂದು. ಅಲ್ಲದೇ ಈ ಕೃತಿಯು ಅವರ ಮಹತ್ತ್ವಾಕಾಂಕ್ಷೆಯ ಮೇರುಕೃತಿ. ಭಾರತೀಯ ಭಾಷೆಗಳಲ್ಲೂ, ಪಾಶ್ಚಾತ್ಯಭಾಷೆಗಳಲ್ಲೂ ಗೌತಮಬುದ್ಧನ ಮೇಲೆ ಬಂದಿರುವ ಎಲ್ಲಾ ಕೃತಿಗಳ ಪರಾಮರ್ಶನ ಮಾಡಿ ಮತ್ತು ಪಾಲಿ–ಸಂಸ್ಕೃತ ಗ್ರಂಥಗಳ ಸಮಗ್ರ ಅಧ್ಯಯನ ನಡೆಸಿ ಅವರು ನಿರ್ಮಾಣಗೊಳ್ಳುವ ಒಂದು ವರ್ಷದ ಹಿಂದೆಯೇ ಇದನ್ನು ಪ್ರಕಟಣೆಗೆ ಸಿದ್ಧಪಡಿಸಿದ್ದರು. ಅವರ ಕಾಲದಲ್ಲಿ ಈ ಕೃತಿಯು ಪ್ರಕಟಗೊಳ್ಳಲಿಲ್ಲ, 1957ರಲ್ಲಿ ಇದು ಪ್ರಕಟಗೊಂಡಿತು. ಇದು ಪ್ರಕಟಗೊಂಡು ಅರುವತ್ತು ವರ್ಷದ ನಂತರ ಕಲಬುರಗಿಯ ಪಾಲಿ ಇನ್ ಸ್ಟಿಟ್ಯೂಟ್ ಸಂಸ್ಥೆಯು ಇದನ್ನು ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಹೊರತಂದಿದೆ. ಪಾಲಿ ಸಂಸ್ಥೆಯು ಉನ್ನತ ಶಿಕ್ಷಣ ಅಡಿಯಲ್ಲಿ ರಚಿತವಾದ ಸ್ವಾಯತ್ತ ಸಂಸ್ಥೆ. ಈ ಕೃತಿಯನ್ನು ಅನುವಾದಕರೂ, ಸ್ವತಂತ್ರ ಬರೆಹಗಾರರೂ, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಎನ್. ಜಗದೀಶ ಕೊಪ್ಪ ಅವರು ಅನುವಾದಿಸಿ ಈ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.
    ಕಪಿಲವಸ್ತು ಎಂಬ ನಗರ ಶಾಕ್ಯ ರಾಜ್ಯದ ರಾಜಧಾನಿಯಾಗಿತ್ತು. ಶಾಕ್ಯರ ರಾಜ್ಯವು ಈಶಾನ್ಯ ಭಾರತದ ಒಂದು ಸ್ವತಂತ್ರ ರಾಜ್ಯವಾಗಿತ್ತು. ಸಿನಹು ಎಂಬ ರಾಜನಿದ್ದನು, ಅವನ ಮಗನಾದ ಶುದ್ಧೋಧನ ಮುಂದೆ ಅ ಸಾಮ್ರಾಜ್ಯದ ರಾಜನಾದನು. ಶುದ್ಧೋಧನನು ಮಹಾಪರಾಕ್ರಮಿಯಾಗಿದ್ದನು ಹಾಗೂ ಬಹುದೊಡ್ಡ ಸೈನ್ಯದ ಒಡೆಯನಾಗಿದ್ದನು. ಶುದ್ಧೋಧನನು ದೇವದಾಹ ಎಂಬ ಹಳ್ಳಿಯ ವಾಸಿಯಾದ ಕೋಲಿಯ ವಂಶದ ಅಂಜನ ಮತ್ತು ಸುಲಕ್ಷಣಾ ಎಂಬ ದಂಪತಿಯ ಪುತ್ರಿಯರನ್ನು ಮದುವೆಯಾದನು. ಮೊದಲಿಗೆ, ಮೊದಲನೇ ಪುತ್ರಿಯಾದ ಮಹಾಮಾಯೆ ಎಂಬುವವಳನ್ನು ಮದುವೆಯಾಗಿ, ನಂತರ ತನ್ನ ಪತ್ನಿ ಮಹಾಮಾಯೆಯ ಹಿರಿಯ ಸಹೋದರಿಯಾದ ಮಹಾಪ್ರಜಾಪತಿ ಎಂಬಾಕೆಯನ್ನು ವಿವಾಹವಾದನು.
    ಶುದ್ಧೋಧನ ಮತ್ತು ಮಹಾಮಾಯೆಗೆ ಕ್ರಿಸ್ತಪೂರ್ವ 563ನೇ ವರ್ಷದ ವೈಶಾಖ ಪೂರ್ಣಿಮೆಯ ದಿನದಂದು ಮಹಾಮಾಯೆಗೆ ಗಂಡುಮಗುವಿನ ಜನನವಾಯಿತು. ಅ ಗಂಡು ಮಗುವಿಗೆ ಸಿದ್ಧಾರ್ಥ ಗೌತಮ ಎಂದು ಹೆಸರಿಡಲಾಯಿತು. ಮಹಾಮಾಯೆಯು ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ  ತುತ್ತಾದಳು. ಅಕೆಯ ಕಾಯಿಲೆಯು ಗಂಭೀರ ಸ್ಥಿತಿಯನ್ನು ಮುಟ್ಟಿತು. ತನ್ನ ಬದುಕಿನ ಅಂತ್ಯಕಾಲ ಸಮೀಪಿಸುತ್ತಿದೆ ಎಂಬುವುದನ್ನು ಅರಿತ ಮಹಾಮಾಯೆಯು ತನ್ನ ಸಹೋದರಿ ಪ್ರಜಾಪತಿ ಗೋತಮಿಯನ್ನು ಕರೆದು, ‘ಸಹೋದರಿ ಪ್ರಜಾಪತಿ, ನನ್ನ ಮಗುವನ್ನು ನಿನ್ನ ವಶಕ್ಕೆ ಒಪ್ಪಿಸುತ್ತಿದ್ದೇನೆ, ನೀನು ಅವನನ್ನು ಹೆತ್ತತಾಯಿಗಿಂತಲೂ ಹೆಚ್ಚು ಪ್ರೀತಿಸುತ್ತೀಯ ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ’ ಎಂದು ನುಡಿದು ಕೊನೆಯುಸಿರೆಳೆದಳು. ಹೀಗೆ ಸಿದ್ಧಾರ್ಥ ಗೌತಮನು ಮಹಾಪ್ರಜಾಪತಿಯ ಆರೈಕೆಯಲ್ಲಿ ಬೆಳೆದು ದೊಡ್ಡವನಾದನು. ಮಹಾಪ್ರಜಾಪತಿ ಆರೈಕೆಯಲ್ಲಿ ಮತ್ತು ಮಗನಾಗಿ ಬೆಳೆದ ವ್ಯಕ್ತಿಯೇ ‘‘ಗೌತಮ ಬುದ್ಧ’’. ಇವನು ಮುಂದೆ ಬೌದ್ಧ ಧರ್ಮವನ್ನು ಸ್ಥಾಪಿಸಿದನು.
    ಇಲ್ಲಿ ಈ ಕೃತಿಯ ಪ್ರಸ್ತಾಪ ಏಕೆ ಎಂಬುವುದನ್ನು ನೋಡೋಣ. ಗೌತಮ ಬುದ್ಧನ ತಾಯಿ ಪ್ರಜಾಪತಿ ಎಂದಾಯಿತಲ್ಲವೆ?. ಬುದ್ಧನನ್ನು ಸಾಕಿ ಬೆಳೆಸಿದವಳೂ ಸಹ ಪ್ರಜಾಪತಿ ಎಂದಾಯಿತಲ್ಲವೆ?. ಬುದ್ಧನ ತಾಯಿ ಪ್ರಜಾಪತಿ ಕುಲದವಳೆ?, ಅಥವಾ ಅವಳ ಹೆಸರು ಮಾತ್ರ ಪ್ರಜಾಪತಿಯೇ. ಅವಳ ಕುಲ ಕೋಲಿಯ ವಂಶವು ಪ್ರಜಾಪತಿಗೆ ಸೇರಿದ್ದೇ? ಅವಳ ಕುಲ ಕೋಲಿಯ ವಂಶವು ಪ್ರಜಾಪತಿಗೆ ಸೇರಿದ್ದು ಎಂದಾದರೆ, ಅವಳು ಪ್ರಜಾಪತಿಗೆ ಸೇರುತ್ತಾಳೆ ಮತ್ತು ಬುದ್ಧನು ಸಹ ಪ್ರಜಾಪತಿಗೆ ಸೇರುತ್ತಾನೆ ಎಂದಾಯಿತಲ್ಲವೆ?( ಬುದ್ಧನನ್ನು ಒಂದು ಕುಲಕ್ಕೆ ಸೇರಿಸುವುದ ಸಂಜಸವಲ್ಲದಿದ್ದರು, ಅವನ ಪೂರ್ವ ಇತಿಹಾಸವನ್ನು ತಿಳಿಯುವುದು ತಪ್ಪಲ್ಲ, ಮತ್ತು ಈ ಪೂರ್ವ ಇತಿಹಾಸಕ್ಕೆ ಮಾತ್ರ ಸಿಮೀತವಾಗಿ ಇಲ್ಲಿ ನೋಡುವುದು ಉತ್ತಮ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾದರೆ ನಮ್ಮೇಲ್ಲರಿಗೂ ಹೆಮ್ಮೆ). ಇದೇ ವಿಷಯವನ್ನು ಒಮ್ಮೆ, ನಮ್ಮ ಇತಿಹಾಸ ಸಂಶೋಧಕರಾದ ಮಂಜಪ್ಪ ಬುರಡೆಕಟ್ಟೆಯವರು ಹೇಳಿದ್ದರು. ಎಲ್ಲಿಯಾದರೂ ಅ ಬಗ್ಗೆ ಪ್ರಸ್ತಾಪಿಸಿದ ಪುಸ್ತಕ ಸಿಕ್ಕರೆ ನೋಡು ಎಂದು ತಿಳಿಸಿದ್ದರು. ಪ್ರಜಾಪತಿಯ ವಿಷಯವು ಡಾ. ಬಿ.ಆರ್ ಅಂಬೇಡ್ಕರ್ ಅವರ ಪುಸ್ತಕವಾದ ಬುದ್ಧ ಅಂಡ್ ಹಿಸ್ ಧಮ್ಮ ಎಂಬುವುದುರಲ್ಲಿ ವಿವರವಾಗಿ ಮೂಡಿಬಂದಿದೆ. ನೋಡಿ ನಮಗೆ ಎಂತಹ ಇತಿಹಾಸವಿದೆ ಎನ್ನುವುದನ್ನು. ಉತ್ತರ ಭಾರತದಲ್ಲಿ ಕುಂಬಾರರಿಗೆ ಪ್ರಜಾಪತಿ ಎಂದು ಕರೆಯುತ್ತಾರೆ. ನೀವು ಸಹ ಈ ಪುಸ್ತಕವನ್ನು ಒಮ್ಮೆ ಓದಿ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಮ್ಮ ಇತಿಹಾಸಕಾರರು ಮಾಡಬೇಕು. ನೀವು ಪುಸ್ತಕ ಸಿಕ್ಕರೆ ಒಮ್ಮೆ ಓದಿ.

ಆಧಾರ ಮತ್ತು ಕೃಪೆ: ಡಾ. ಎನ್.ಜಗದೀಶ ಕೊಪ್ಪ ಅವರ ಬುದ್ಧ ಮತ್ತು ಆತನ ಧಮ್ಮ ಎಂಬ ಪುಸ್ತಕದಿಂದ...

ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಪುಸ್ತಕದಲ್ಲಿನ ಕುಂಬಾರ ಕುರಿತು ತತ್ವಪದ


.......ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಪುಸ್ತಕದಲ್ಲಿನ ಕುಂಬಾರ ಕುರಿತು ತತ್ವಪದ.....
    ಕೊಪ್ಪಳ ಜಿಲ್ಲಾ ಕೇಂದ್ರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲಾರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಬಿ ಚಿಲ್ಕರಾಗಿ ಅವರು ಗುರು ಶಿಷ್ಯರ ತತ್ವ ಪದಗಳನ್ನು ಸಂಪಾದಿಸಿ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎಂಬ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಇವರು ತತ್ವ ಪದಗಳನ್ನು ಸಂಗ್ರಹಿಸುವಲ್ಲಿ ರಾಜ್ಯದಲ್ಲಿ ವಿಶೇಷ ಗೌರವವನ್ನು ಗಳಿಸಿಕೊಂಡಿದ್ದಾರೆ. ಹೀಗಾಗಲೇ ತತ್ವ ಪದಗಳ ಸಂಪಾದನೆಯ ಅನೇಕ ಪುಸ್ತಕಗಳನ ್ನು ಹೊರತಂದಿದ್ದಾರೆ.  ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎಂಬ ಪುಸ್ತಕದಲ್ಲಿ ಶ್ರೀ ಹುಲ್ಲೂರು ಶಿವಣ್ಣ ಎಂಬುವವರು ಬರೆದ ಒಂದು ತತ್ವಪದ ಕುಂಬಾರರ ಕುರಿತದ್ದಾಗಿದೆ.
ನೋಡಿ...(ವಿ.ಸೂ. ಇದು ತತ್ವಪದ ಇದನ್ನು ನಕಲು ಮಾಡಿಕೊಂಡು ನಿಮ್ಮ ಹೆಸರನ್ನು ಸೇರಿಸಿಕೊಳ್ಳದಿರಿ)
    ಚಿಲ್ಕರಾಗಿಯ ಕುಂಬಾರ ಬಸಣ್ಣ(1947) ಎಂಬುವವರು ಸಹ ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ಅವರು ರಚಿಸಿದ ತತ್ವಪದಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಹೊರತರಬೇಕಾದ ಕರ್ತವ್ಯ ನಮ್ಮ ಕುಂಬಾರರ ಮೇಲೆ ಇದೆ.




ಕುಂಬಾರೊ ನಾವು ಕುಂಬಾರೊ                                   
ಶಂಭುನಗರಿಯಲ್ಲಿ ಕುಂಭ ತಿಗರಿಯನಿಟ್ಟು   IIಪII

ಪಂಚತತ್ವದ ಘಟವ ವಂಚನಿಲ್ಲದೆ ಸೃಜಿಸಿ   
ಪಂಚಬಾಣನ ಪಿತನ ಸಖನ ನೆನಹಿನೊಳು
ಪಂಚಪುರದೊಳಗಿದ್ದು ಕಿಂಚಿತ್ತು ಮರೆಯದೆ
ಪಂಚಮುಖನದಿವ್ಯ ಧ್ಯಾನದೋಳಿರುವಂಥ

ತಾಮಸಗುಣವಳಿದು ಕಾಮಿತಗಳ ಬಡಿದು
ನಾಮರೂಪಗಳನೆಲ್ಲವನತಿಗಳೆದು
ನೇಮದಿಂದಲಿನಮ್ಮ ಸ್ವಾಮಿಗುಂಡಯ್ಯನ
ಪ್ರೇಮದೋಳೊಗಿಬ್ರಹ್ಮ ಭಾವದಲಿರುವಂಥ

ಬ್ರಹ್ಮಗುಂಡನಂಶದ ಬ್ರಹ್ಮ ಸೂತ್ರವನಿಡಿದ
ಬ್ರಹ್ಮವೆಂಬಾಲುದಿ ಮೃಣ್ ಘಟವ ರಚಿಸಿ
ಬ್ರಹ್ಮ ತಿಗರಿಯನ್ನು ಬ್ರಹ್ಮಾಂಡಕಬ್ಬಿಸಿ
ಬ್ರಹ್ಮವರಿದುನಿತ್ಯ ಸುಮ್ಮನೆ ಇರುವಂಥ

ಮನವೆಂಬ ಮಣ್ಣಲ್ಲಿ ಚಿನುಮಯಜಲವಬೆರಸಿ
ಘನವಾಗಿನಾದಿ ಏನಿತೊ ಆಕಾರಗೊಳಿಸಿ
ಬಿನಗುತ್ರಿಗುಣದ ಗಡಿಗೆ ಅಗ್ನಿಯಲಿಟ್ಟು
ಘನಗುರುಮಲ್ಲಿನಾಥನ ಕೃಪಾಸನವೇರಿದಂಥ




ನನ್ನ ದೀಪವಾಳಿ




.....ನನ್ನ ದೀಪವಾಳಿ.....

ಮುರಿದು ಬಿದ್ದ ಚಪ್ಪರದ
ಕೆಳಗಿನ ಆವಿಗೆಯ ಗೂಡು
ಜರಿಯ ಮಳೆಗೂ ನೆನೆದು
ನನ್ನಂತೆಯೇ ಕೃಷವಾದ
ದೇಹವನ್ನು ಹೊದ್ದು ನಿಂತಿದೆ...
    ಈ ಮೂಳೆಯನ್ನೊತ್ತಾ ದೇಹದಿಂದ
    ಜೀವತೇಯ್ದು ಮಾಡಿದ ಮಡಿಕೆ ದೀಪಗಳನ್ನಿಟ್ಟು
    ಬೆಂಕಿ ಹಚ್ಚಿದ ನೆನಪು
    ನನ್ನ ಸ್ಮೃತಿ ಪಟಲದಲ್ಲಿ ಮಾಸಿಹೋಗಿದೆ....
ಅದು ಎಂದೊ
ತುಪ್ಪವ ಚುಮುಕಿಸಿ
ಹೋಳಿಗೆಯ ಜೊತೆಗೆ ಅಕ್ಕಿಯ ಅನ್ನವ ಉಂಡಾ
ದೀಪಾವಳಿ ಹಬ್ಬವನ್ನು ನೆನಪಿಸಿದ
ದೀಪಾವಳಿಗಳು ಸಾಲುಸಾಲಾಗಿ ಎಷ್ಟು ಬಂದು ಹೋದವೊ ಲೆಕ್ಕವಿಲ್ಲ...
    ಈ ಮಣ್ಣಿನ ದೇಹ ಮಣ್ಣಿಗೆ ಸೇರುವ ಮುನ್ನಾ
    ನನ್ನ ದೀಪಗಳು ಮನೆ ಮನಗಳನ್ನು ಬೆಳಗಬೇಕು
    ಕತ್ತಲೆಯ ಸರಿಸಿ ದಿವ್ಯಬೆಳಕನ್ನು ಸೂಸಬೇಕು
    ಮತ್ತೆ ನನ್ನ ದೀಪವಾಳಿ ಬಂದು
    ಹೋಳಿಗೆಯ ಜೊತೆಗೆ ಅಕ್ಕಿಯ ಅನ್ನವ ಹೊತ್ತು ತರಬೇಕು...
                   
                        ಕುಬೇರ ಕುಂಬಾರ

ಕುಂಬಾರನ ಯುಗಾದಿ



.......ಕುಂಬಾರನ ಯುಗಾದಿ........

ಭೂವಿಗೆದೆಯೊಡ್ಡಿ
ಆವುಗೆಯ ಬೆಂಕಿಯನುಂಡು
ಮಡಕೆಯ ಕೊರಳಿಗೆ
ಹಳೆಯ ಬೇರಿನ ಮೇಲೆ ಚಿಗುರಿದ
ಹೊಸ ಬೇವು–ಮಾವು ಎಲೆಯ ಕಟ್ಟಿ
ನಮ್ಮೊಳಗೆ ಅಡಗಿರುವ ಮೌನ ಕ್ರಾಂತಿಯ ಎಚ್ಚರಿಸಿ
ಉಗ್ರಕ್ರಾಂತಿಗೆ ಮುನ್ನುಡಿ ಬರೆಯೋಣ
ನಮ್ಮ ಬದುಕಿನ ಭಾಗವಾದ ಚಕ್ರ
ಖುತುಚಕ್ರದಂತೆ ಓಡಬೇಕು ಅದಕ್ಕೆ
ಅಹಂಗಳನ್ನು, ಪ್ರತಿಷ್ಟೆಗಳನ್ನು ಬಿಟ್ಟು
ನಾವು ನಾವಾಗಬೇಕು
ಹಳೆಬೇರು ಹೊಸತಿಗೆ ಮೂಲಸೆಲೆಯಾಗಿ
ಹೇವಿಳಂಬಿಯಲ್ಲಿ
ಹೊಸ ಹೋರಾಟಕ್ಕೆ ಅಣಿಯಾಗುತ್ತಾ
ಹೊಸ ವರ್ಷದ ಹೊಸ ನಸುಕಿನ ಬೆಳಕಲ್ಲಿ
ನಮ್ಮ ಬದುಕಿಗೆ
ಹೊಸ ಯುಗಾದಿಯನ್ನು ಬರಮಾಡಿಕೊಳ್ಳೋಣ...
            ಕುಬೇರ ಕುಂಬಾರ



ಕುಂಬಾರನ ಮನೆಯಂಗಳದ ಹಣತೆ


   
ಕುಂಬಾರನ ಮನೆಯಂಗಳದ ಹಣತೆ
  
ಕುಂಬಾರನ ಹಣತೆಯಲ್ಲಿ
ಭಕ್ತಿಯ ತೈಲವನು ಸುರಿದು
ಶುದ್ಧವೆಂಬ ಹತ್ತಿಯ ಭತ್ತಿಯನಿಟ್ಟು
ಅಗ್ನಿದೇವನ ಆಹ್ವಾನಿಸಿ
ಅಜ್ಞಾನ,ಕಾಮ,ಕ್ರೋದ,ಮದ–ಮತ್ಸರ,ಮೋಹ–ಲೋಭಗಳನ್ನು
ಸುಟ್ಟು ಸುಜ್ಞಾನವೆಂಬ ಬೆಳಕನ್ನು ಹರಿಸೋಣ
ಕುಂಬಾರನ ಹಣತೆಯಲ್ಲಿ
ಅ ಸಂಘ ಈ ಸಂಘ
ಅ ತೆಲುಗು ಈ ತಮಿಳು
ಅ ಕುಲ ಈ ಕುಲಾಲ
ಅ ಮೋಹ ಈ ಮೂಲ್ಯ
ಅ ಲಿಂಗ ಈ ಲಿಂಗಾಯಿತ
ಅ ಚಕ್ರ ಈ ಚಕ್ರಸಾಲಿ
ಅ ಭಕ್ತ ಈ ಗುಂಡಾಭಕ್ತ
ಅ ಕುಂಬಾರ ಶೇಟ್ಟಿ ಈ ಕನ್ನಡ ಕುಂಬಾರ
ಎಂಬ ಎಲ್ಲಾ ಭತ್ತಿಯ ಒಸೆದು‌‌
ಅಖಂಡವೆಂಬ ಒಂದೇ ಭತ್ತಿಯ ಮಾಡಿ
ಎಲ್ಲರ ಮನೆಯ ಏಕತೆಯ ಎಣ್ಣೆಯನ್ನು ಸುರಿದು
ಅ ವಿಧ ಈ ವಿಧಗಳು
ಅ ಅಚಾರ ಈ ವಿಚಾರಗಳನ್ನು ಸುಟ್ಟು
ಕುಂಬಾರನ ಮನೆಯಂಗಳದಲ್ಲಿ
ಬೆಳಕನು ಚಲ್ಲೋಣ
ದೀಪಾವಳಿಯ ಸಂತಸದಲಿ.....

    ಕುಬೇರ ಕುಂಬಾರ



ಮಂಜಪ್ಪ ಬುರುಡೆಕಟ್ಟೆ ಕುಂಬಾರ ಗುರುಗಳಿಗೆ ಜನ್ಮ ದಿನದ ಶುಭಾಶಯಗಳು

ಮಂಜಪ್ಪ ಬುರುಡೆಕಟ್ಟೆ ಕುಂಬಾರ ಗುರುಗಳಿಗೆ ಜನ್ಮ ದಿನದ
ಶುಭಾಶಯಗಳು
    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮದ ಗಿರಿಜಮ್ಮ, ಮಲ್ಲೇಶ ಕುಂಬಾರ ದಂಪತಿಯರಲ್ಲಿ ಜನಿಸಿ , ಬುರುಡೆಕಟ್ಟೆ, ಆನಿವಾಳ, ಮಲ್ಲಪ್ಪನಹಳ್ಳಿಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿ–ಪೂರ್ವ ಶಿಕ್ಷಣ ಹಾಗೂ ಚಿತ್ರದುರ್ಗದಲ್ಲಿ ಶಿಕ್ಷಕರ ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಿಸುತ್ತಿದ್ದಾರೆ. ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರಪದವಿ ಪಡೆದಿ್್ದಾರೆ. ನಾಟಕ, ಕವನ ರಚನೆ, ಸಾಹಿತ್ಯ ರಚನೆ ಮತ್ತು ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ವಿವಿಧ ಇತಿಹಾಸ ಸಮ್ಮೇಳನದಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶ್ರೀ ಸಿದ್ಧಗಂಗಾ ಮಠವು ನಾಡಿನ ಪುಣ್ಯಪುರುಷರ, ದಾಸೋಹಿಗಳ ಕುರಿತು ಜ್ಞಾನದಾಸೋಹ ಮಣಿಮಾಲೆಯ ಎಂಬ ನೂರಾ ಎಂಟು ಪುಸ್ತಕಗಳನ್ನು ಪ್ರಕಟಿಸಿತ್ತು. ಇದರಲ್ಲಿ ಮಂಜಪ್ಪರವರ ಶಿವಶರಣೆಯರು ಎಂಬ ಒಂದು ಕೃತಿಯೂ ಸೇರಿದೆ. ಇತ್ತೀಚೆಗೆ ಸರ್ವಜ್ಞ ಅವರ ಕುರಿತ ಸಂಶೋಧನ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.
    ಕುಂಬಾರ ಜನಾಂಗದ ಅಧ್ಯಯನ ಮಾಡುತ್ತಿರುವವರಲ್ಲಿ ಮಂಜಪ್ಪ ಬುರುಡೆಕಟ್ಟೆಯವರು ಮುಂಚುಣಿಯಲ್ಲಿ ಬಂದು ನಿಲ್ಲುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಬಿಡುವಿನ ಮತ್ತು ರಜೆಯ ಸಮಯದಲ್ಲಿ ಕುಂಬಾರ ಜನಾಂಗಕ್ಕೆ ಸಂಬಂದಿಸಿದಂತೆ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಪ್ರತಿ ದಿನವು, ಪ್ರತಿ ಕ್ಷಣವು ಕುಂಬಾರ ಜನಾಂಗಕ್ಕಾಗಿ ಇವರ ಹೃದಯ ತುಡಿಯುತ್ತಿರುತ್ತದೆ. ಇವರ ಈ ಉತ್ಸಾಹ ಎಂದೂ ಬತ್ತಿಲ್ಲ, ತುಂಬ ಹತ್ತಿರ ದಿಂದ ನಾನು ನೋಡಿದಂತೆ ಕುಂಬಾರ ಜನಾಂಗದ ಅಭಿವೃದ್ಧಿ ಕುರಿತು ಯಾವಾಗಲೂ ಯೋಚಿಸುತ್ತಿರುತ್ತಾರೆ. ಸಂಘ –ಸಂಸ್ಥೆಗಳಿಗೆ, ಯುವಕರಿಗೆ ಮಾರ್ಗದರ್ಶಕರಾಗಿ ನಿಂತು, ಸಲಹೆ ಸೂಚನೆಯನ್ನು ನಿಡುತ್ತಿರುತ್ತಾರೆ. ಕುಂಬಾರರ ವೈಭವಗಳನ್ನು, ಮಹತ್ವವನ್ನು, ಶ್ರೇಷ್ಟತೆಯನ್ನು, ವರ್ಚಸ್ಸುನ್ನು ಸದಾ ಮೆರೆಸುತ್ತಾ, ಕುಂಬಾರ ಜನಾಂಗದ ಹೆಸರಿಗೆ ಉಸಿರು ತುಂಬಲು ಮೌನವಾಗಿ ಸಂಶೋಧನೆ ಮಾಡುತ್ತ, ದುಡಿಯುತ್ತ ತಮ್ಮ ಜೀವನವನ್ನೇ ಈ ಕುಂಬಾರ ಜನಾಂಗಕ್ಕೆ ಮುಡಿಪಾಗಿಟ್ಟಿದ್ದಾರೆ. ಇಂದು ಅವರ ಹುಟ್ಟಿದ ದಿನ. ಮಂಜಪ್ಪ ಗುರುಗಳಿಗೆ ಕುಂಬಾರ ಜನಾಂಗದ ಪರವಾಗಿ ಮತ್ತು ನನ್ನ ವ್ಯಯಕ್ತಿವಾಗಿ, ಅವರಿಗೆ ತುಂಬು ಹೃದಯದಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಹೆಮ್ಮೆ ಪಡುತ್ತೆನೆ.


ರತ್ನಪ್ಪಣ್ಣ ಕುಂಬಾರ ರವರ ಜೀವನ ಚರಿತ್ರೆಯ ಪುಸ್ತಕ


  ರತ್ನಪ್ಪಣ್ಣ ಕುಂಬಾರ ರವರ ಜೀವನ ಚರಿತ್ರೆಯ ಪುಸ್ತಕ

           ಗದಗಿನ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠವು ಡಾ. ಎಂ.ಎಂ. ಕುಲಬುರ್ಗಿ ಅಧ್ಯಯನಸಂಸ್ಥೆಯ ಅಡಿಯಲ್ಲಿ 19,20 ಮತ್ತು 21ನೇ ಶತಮಾನದಲ್ಲಿ ಬಾಳಿದ ನೂರಾರು ಜನ ಲಿಂಗಾಯತ ಪುಣ್ಯಪುರುಷರನ್ನು ಸ್ಮರಿಸುತ್ತ, ಉಪನ್ಯಾಸಗಳನ್ನು ಏರ್ಪಡಿಸುತ್ತ ಮತ್ತು ಅ ಉಪನ್ಯಾಸ ಮಾಲೆಯು ಜನಮುಖಿಯಾಗಬೇಕು ಎಂಬ ದೃಷ್ಟಿಯಿಂದ ವಿವಿಧ ಮಾಲಿಕೆಗಳಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಜನರಿಗೆ ಉಣಪಡಿಸುತ್ತಿದೆ. ಇತಂಹ ಮಾಲಿಕೆಯಲ್ಲಿ ‘ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ’ ಯೂ ಸಹ ಒಂದು.
    ಪ್ರತಿ ತಿಂಗಳು ಸಮಾಜವನ್ನುದ್ಧರಿಸಿದ ಒಬ್ಬ ಲಿಂಗಾಯತ ಪುಣ್ಯಪುರುಷರ ಚರಿತ್ರೆಯನ್ನು ಕುರಿತು ಉಪನ್ಯಾಸ ಏರ್ಪಡಿಸುವುದು. ಏರ್ಪಡಿಸಿದ ಉಪನ್ಯಾಸವನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ವಿತರಣೆಗೊಳಿಸುವುದು, ಈ ಮಾಲಿಕೆಯ ಸಂಕಲ್ಪ. ಅದರಂತೆ ತಿಂಗಳು ತಿಂಗಳು ಪ್ರಕಟವಾಗುವ ಮಾಲಿಕೆಯಲ್ಲಿ 312ನೇ ಕೃತಿಯಾಗಿ ನಮ್ಮ ಕುಂಬಾರ ಜನಾಂಗದ ಹೆಮ್ಮೆಯ ಹಾಗೂ ದೇಶಭಕ್ತರಾದ ರತ್ನಪ್ಪ ಕುಂಬಾರ ಅವರನ್ನು ಕುರಿತು ಪ್ರಕಟವಾಗಿದೆ. ಡಾ.ಎಂ.ಬಿ. ಹೂಗಾರ ಎಂಬುವವರು ಈ ಪುಸ್ತಕವನ್ನು ರಚಿಸಿದ್ದಾರೆ. ಹುಬ್ಬಳಿಯ ಮಠದ ಭಕ್ತರಾದ ಶ್ರೀ ಉಮಾದೇವಿ ಗುರುಸಿದ್ಧಪ್ಪ ಬುಳ್ಳಾನವರು ಪ್ರಕಟಣೆಗೆ ಸಹಕಾರಿಸಿದ್ದಾರೆ.
    ದೇಶಭಕ್ತ ಮತ್ತು ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ರತ್ನಪ್ಪಣ್ಣ ಕುಂಬಾರ ಅವರ ಜೀವನ, ಶಿಕ್ಷಣ, ಸ್ವಾತಂತ್ರ್ಯ ಚಳುವಳಿಯ ಹೋರಾಟ, ರಾಜಕೀಯ, ಸಹಕಾರ ಚಳುವಳಿ, ಸೇವಾಮನೋಭಾವ ಮತ್ತು ಇತ್ಯಾಧಿ ವಿಷಯಗಳನ್ನು ‘‘ಹೋರಟದ ಹೆಜ್ಜೆ, ಸಹಕಾರ ಚಳುವಳಿ, ಒಕ್ಕಲುತನದ ವಿಕಾಸ, ಕಾರ್ಮಿಕರ ಕಲ್ಯಾಣ–ಶಿಕ್ಷಣ, ರಾಜಕೀಯ ಸೇವೆ, ಪ್ರಗತಿಪರ ಚಿಂತನ ಮತ್ತು ಹಿರಿಯರು ಕಂಡ ಅಣ’’್ಣಾ ಎಂದು, ಒಟ್ಟು ಏಳು ಅಧ್ಯಾಯನದ ಮೂಲಕ ಲೇಖಕರು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಅಧ್ಯಾಯವು ಅವರ ವ್ಯಕ್ತಿತ್ವ, ಅದರ್ಶಮೌಲ್ಯಗಳು ಹಾಗೂ ಅವರ ಸಮಾಜೀಕ ಜೀವನದ ದಿಟ್ಟತನದ ನಿಲುವುಗಳನ್ನು ಮತ್ತು ಹೋರಾಟಗಳನ್ನು ಓದುತ್ತಾ ಹೋದರೆ ರೋಮಾಂಚನವಾಗುತ್ತದೆ.
    ರತ್ನಪ್ಪಣ್ಣ ಕುಂಬಾರ ಅವರು ದಕ್ಷಿಣ  ಭಾರತದ ಹಲವು ಸಂಸ್ಥಾನಗಳ ವಿಲಿನೀಕರಣಕ್ಕೆ ಪ್ರಯತ್ನಿಸಿ ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲರೆಂದು ಖ್ಯಾತಿಗೆ ಭಾಜನರಾಗಿದ್ದರು. ಲಿಂಗಾಯತ ಬೋರ್ಡಿಂಗ್ ಸಂಸ್ಥೆಯ ಅಧೀಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ಸ್ವತಂತ್ರ ಚಳುವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಫೌಜಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ರಾಜಕೀಯ ಜೀವನಕ್ಕೆ ಚಾಲನೆ ನೀಡಿದರು. ಅಗಸ್ಟ್ 9, 1942ರ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಜೀಯವರ ಕರೆಯ ಮೇರೆಗೆ ಸಕ್ರಿಯವಾಗಿ ಭಾಗವಹಿಸಿ ಚಲೇಚಾವ್ ಚಳುವಳಿಯನ್ನು ಮಹಾರಾಷ್ಟ್ರದಲ್ಲಿ ಯಶಸ್ವಿಗೊಳಿಸಿ ಬ್ರೀಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನು ಅನುಭವಿಸಿದರು.
   
    ’ನಹಿ ಸಂಸ್ಕಾರ ನಹಿ ಸಹಕಾರ’ ಎಂದು ಮಹಾರಾಷ್ಟ್ರದ ಗಡಿಭಾಗದಲ್ಲಿ ಲೋಕ ಕಲ್ಯಾಣಕಾರಕ ಕಾರ್ಯ ಮಾಡಿ ಜನಸಾಮಾನ್ಯರಿಂದ ದೇಶಭಕ್ತ ಎಂಬ ಗೌರವಕ್ಕೆ ಪಾತ್ರರಾದರು. ಸಹಕಾರ ತತ್ವದ ಬುನಾದಿಯ ಮೇಲೆ ಸಮಾಜವಾದವನ್ನು ಪ್ರತಿಷ್ಠಾಪಿಸಿದ ಶ್ರೇಯಸ್ಸು ಅವರದು. ಸಕ್ಕರೆ ಕಾರಖಾನೆ, ನೂಲಿನ ಗಿರಣಿ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಂಸ್ಥೆಗಳ ಸಂಸ್ಥಾಪಕರಾಗಿ ಅವರು ಮಾಡಿದ ಕಾರ್ಯ ಅವಿಸ್ಮರಣೀಯವಾಗಿದೆ. ಸ್ವಾತಂತ್ರ್ಯಾನಂತರವೂ ಶಾಸಕರಾಗಿ, ಸಂಸದರಾಗಿ, ಮಂತ್ರಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ಮತ್ತು ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಮತ್ತು ಗೌರಗಳನ್ನು ನೀಡಿದ್ದಾರೆ.
    ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ರತ್ನಪ್ಪಣ್ಣ ಕುಂಬಾರರ ಬಗ್ಗೆ ಸಮಗ್ರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಯಾವ ಪುಸ್ತಕವು ಪ್ರಕಟವಾಗಿಲ್ಲ. ಆದರೆ ಕುಂಬಾರರ ಕೆಲ ಪತ್ರಿಕೆಗಳಲ್ಲಿ ಮತ್ತು ಇತರೆ ಪತ್ರಿಕೆಗಳಲ್ಲಿ ಕೆಲವೊಂದು ಲೇಖನಗಳು ಪ್ರಕಟವಾಗಿವೆ. ರತ್ನಪ್ಪಣ್ಣರವರ ಸಂಪೂರ್ಣ ಜೀವನ ಚರಿತ್ರೆಯನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಶ್ರಮಿಸಿದ್ದಾರೆ. ನಮ್ಮ ಈ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ನಮ್ಮ ನಾಡಿನ ಎಲ್ಲಾ ಕುಂಬಾರರು ತಿಳಿದುಕೊಳ್ಳಲೇಬೇಕು. ಇವರ ಜೀವನ ಚರಿತ್ರೆಯ ಪುಸ್ತಕ ನಮ್ಮ ಮನೆಗಳಿಗೆ ಕಳಶ ಇದ್ದಂತೆ, ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿ, ಚೈತನ್ಯವನ್ನು ನೀಡುವ ಭಗವದ್ಗೀತೆ. ಗದಿಗಿನ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ. ಅಲ್ಲಿ ಪುಸ್ತಕಗಳ ಸಿಗುತ್ತವೆ. ಪುಸ್ತಕದ ಬೆಲೆ ಕೇವಲ 60ರೂಪಾಯಿ. ನಾಡಿನ ಪ್ರಸಿದ್ಧ ಪುಸ್ತಕ ಅಂಗಡಿಗಳಲ್ಲಿಯೂ ಸಹ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಕುಂಬಾರರು ಪುಸ್ತಕಕ್ಕೆ ನನ್ನನ್ನು ಸಂಪರ್ಕಿಸಬಹುದು.(7892358935)

ಕುಬೇರ ಕುಂಬಾರ